ಸೋಮವಾರ, ಮೇ 11, 2009
ಅಯೊಡಿನ್ ಹೆಸರಿನ ಮಹಾದ್ರೋಹ.!!!
ಅಯೊಡಿನ್ ನಮ್ಮ ದೇಹಕ್ಕೆ ಮೈಕ್ರೊ ಪ್ರಮಾಣದಲ್ಲಿ ಬೇಕಾದ ಅಂಶ. ಅಯೋಡಿನ್ ಅಂಶ ನಮ್ಮ ದೇಹದಲ್ಲಿ ಕಡಿಮೆಯಾದಾಗ ಥೈರಾಯಿಡ್ ಗ್ರಂಥಿ ಅಯೋಡಿನ್ ಅನ್ನು ಹೆಚ್ಚಾಗಿ ಹೀರಿಕೊಳ್ಳಲು ಊದಿಕೊಳ್ಳತೊಡಗುತ್ತದೆ. ಇದೇ ಗಾಯ್ಟರ್ ರೋಗ.
ಗಾಯ್ಟರ್ ಅಥವಾ ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡುಬರುವುದೇ ವಿರಳ. ಅಯೋಡಿನ್ ಕೊರತೆಯನ್ನು ದೊಡ್ಡ ಗಂಡಾಂತರವೆಂಬಂತೆ ಬಿಂಬಿಸಿ ಅಯೋಡೀಕರಿಸಿದ ಉಪ್ಪನ್ನು ಬಲವಂತವಾಗಿ ಎಲ್ಲರಿಗೂ ತಿನ್ನಿಸಲಾಗುತ್ತಿದೆ. ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡು ಬರುವುದು ಲಡಾಕ್, ಶಿಮ್ಲಾ ರೀತಿಯ ಅತಿ ಹೆಚ್ಚಿನ ಮಣ್ಣಿನ ಸವೆತ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ. ಎಲ್ಲಾ ಸೇರಿದರೇ ಅಯೋಡಿನ್ ಕೊರತೆಯನ್ನು ಎದುರಿಸುತ್ತಿರುವುದು ಶೇ.೨ ರಷ್ಟು ಜನರು ಮಾತ್ರ. ಶೇ.೨ರ ಕೊರತೆಯನ್ನು ನೀಗಿಸುವುದಕ್ಕಾಗಿ ಉಳಿದ ಶೇ.೯೮ ರಷ್ಟು ಜನರಿಗೆ ಅಯೋಡಿನ್ ತಿನ್ನಿ ಎಂದು ಪ್ರಚಾರ ಮಾಡಲಾಗುತ್ತಿದೆ.
ಅನೇಕ ವ್ಯಕ್ತಿಗಳಲ್ಲಿ ಅಯೋಡಿನ್ ಅಲರ್ಜಿ ಇರುತ್ತದೆ. ಗಳಗಂಡ ಚಿಕಿತ್ಸೆಗಾಗಿ ಅಯೋಡಿನ್ ನೀಡಬೇಕಾದರೂ ಈ ಅಲರ್ಜಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲರ್ಜಿ ಇರುವ ವ್ಯಕ್ತಿಗಳಲ್ಲಿ ಚಿಕ್ಕ ಪ್ರಮಾಣದ ಅಯೋಡಿನ್ ಸಹ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಲ್ಲುದು. ಇದಲ್ಲದೇ ದೇಹದಲ್ಲಿ ಅಯೋಡಿನ್ನ ಅನವಶ್ಯಕ ಹೆಚ್ಚಳದಿಂದಾಗಿ ಖಿನ್ನತೆ, ಉಸಿರಾಟದ ತೊಂದರೆಗಳು ನಪುಂಸಕತ್ವ, ಕೂದಲುದುರುವಿಕೆ,ಚರ್ಮದ ರೋಗಗಳು , ಗಳಗಂಡ ನಿಶ್ಯಕ್ತಿ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ. ಅಯೋಡಿನ್ ತಿನ್ನುವುದನ್ನು ಕಡಿಮೆ ಮಾಡುವುದರಿಂದ ಗಂಟಲಿನ ಕ್ಯಾನ್ಸರ್ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಜಪಾನ್ನಲ್ಲಿ ಸಂಶೋಧನೆಗಳು ತಿಳಿಸುತ್ತವೆ. ಅಯೋಡಿನ್ ಕೊರತೆ ಇರುವ ಜರ್ಮನಿ ದೇಶದಲ್ಲಿ ಗಂಟಲು ಕ್ಯಾನ್ಸರ್ ಕೂಡ ಕಡಿಮೆಯೆ. ಅಲ್ಲದೇ ಗರ್ಭಿಣಿ ಸ್ತ್ರೀಯರಿಗೂ ಅಯೋಡಿನ್ ಅಪಾಯ ಉಂಟುಮಾಡುತ್ತದೆ.
ನಮ್ಮ ದೇಹಕ್ಕೆ ಬೇಕಾದುದಕ್ಕಿಂತ ಹೆಚ್ಚಿನ ಪ್ರಮಾಣದ ಅಯೋಡಿನ್ ಸೇವಿಸಿದರೆ ಅಪಾಯ ಖಂಡಿತ ತಪ್ಪಿದ್ದಲ್ಲ. ವಿಶ್ವ ಆರೊಗ್ಯ ಸಂಸ್ಥೆಯ ನಿಯಮದ ಪ್ರಕಾರ ಒಂದು ದಿನಕ್ಕೆ ಮನುಷ್ಯನೊಬ್ಬ ತೆಗೆದುಕೊಳ್ಳಬಹುದಾದ ಅಯೋಡಿನ್ ಪ್ರಮಾಣ ಹೆಚ್ಚೆಂದರೆ ೨೦೦ ಮೈಕ್ರೊಗ್ರಾಮ್ಗಳು. ಸಧ್ಯದಲ್ಲಿ ನಾವು ಸೇವಿಸುತ್ತಿರುವ ಪ್ರಮಾಣ ಇದಕ್ಕಿಂತ ಎಷ್ಟೊ ಪಟ್ಟು ಹೆಚ್ಚು. ಅನೇಕ ಕಡೆ ಅಯೊಡೀಕರಿಸುವ ನೆಪದಲ್ಲಿ ಪೊಟಾಶಿಯಮ್ ಅಯೊಡೈಡ್ನ್ನು ಸಾಗರದ ಉಪ್ಪಿನ ಮೇಲೆ ಸಿಂಪಡಿಸಲಾಗುತ್ತದೆ. ಈ ರೀತಿ ಎರಚಲಾದ ಅಯೋಡಿನ್ ನಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಸುರಕ್ಷಿತ ಹಾಗೂ ದೇಹ ಇದನ್ನು ಅರಗಿಸಿಕೊಳ್ಳಬಹುದೆ ಎಂಬುದರ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ.
ಹಾಲೆಂಡ್ ಮತ್ತು ಟಾಸ್ಮೆನಿಯಾದಲ್ಲಿ ಅಯೋಡಿನ್ ಉಪ್ಪನ್ನು ಕಡ್ಡಾಯವನ್ನಾಗಿ ಮಾಡಲಾಯಿತು. ನಂತರ ಅಲ್ಲಿನ ಪುರುಷರಲ್ಲಿ ಗಂಟಲಿನ ನಂಜು ಹೆಚ್ಚಾಗಿದ್ದು ಕಂಡು ಬಂದು ಈ ಕಡ್ಡಾಯವನ್ನು ಹಿಂತೆಗೆದುಕೊಳ್ಳಲಾಯಿತು. ಇಂಗ್ಲೆಂಡ್ ಪ್ರಜೆಗಳಲ್ಲಿಯೂ ಒಂದು ಕಾಲದಲ್ಲಿ ಅಯೋಡಿನ್ ಕೊರತೆ ಇತ್ತು. ಆಗ ಇಂಗ್ಲೆಂಡ್ ಸರ್ಕಾರವು ಅಯೋಡಿನ್ ಉಪ್ಪನ್ನು ಕಡ್ಡಾಯ ಮಾಡುವುದರ ಬದಲಾಗಿ ತನ್ನ ಪ್ರಜೆಗಳಿಗೆ ಸರಿಯಾದ ಆಹಾರ ಪದ್ಧತಿಯ ಬಗ್ಗೆ ಮಾರ್ಗದರ್ಶನ ಮತ್ತು ಶಿಕ್ಷಣವನ್ನು ನೀಡಿತು. ನಾರ್ವೆ ಇತ್ಯಾದಿ ದೇಶಗಲಲ್ಲಿಯೂ ಅಯೋಡಿನ್ ರಹಿತ ಉಪ್ಪಿನ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿದೆ.
ಅಯೋಡೀಕರಿಸಿದ ಉಪ್ಪನ್ನು ವಿರೋಧಿಸಲು ಸಾಕಷ್ಟು ಆರ್ಥಿಕ ಹಿನ್ನೆಲೆಯುಳ್ಳ ಕಾರಣಗಳೂ ಇವೆ. ಮೊದಲು ಉಪ್ಪು ಒಂದು ಅಥವಾ ಎರಡು ರೂಪಾಯಿಗೆ ಲಭ್ಯವಿತ್ತು. ಈಗ ಎಂಟರಿಂದ ಹನ್ನೆರಡು ರೂಪಾಯಿ ಆಗಿದೆ. ಅರ್ಧಕ್ಕರ್ಧ ಬಡವರೇ ಇರುವ ನಮ್ಮ ದೇಶದಲ್ಲಿ ಉಪ್ಪನ್ನು ಇಷ್ಟೊಂದು ಹಣ ಕೊಟ್ಟು ಕೊಂಡುಕೊಳ್ಳಲು ಬಹಲ ಜನರಿಗೆ ಸಾಧ್ಯವಾಗುವುದಿಲ್ಲ. ಅಯೋಡಿಕರಿಸದ ಉಪ್ಪನ್ನು ಮಾರಲು ಸರ್ಕಾರ ಅನುಮತಿ ನೀಡುವುದಿಲ್ಲವಾದ್ದರಿಂದ ಅನಿವಾರ್ಯವಾಗಿ ಬಡವರೂ ಸಹ ಎಂಟು ರೂಪಾಯಿ ತೆತ್ತು ಉಪ್ಪನ್ನು ಕೊಳ್ಳಬೇಕಾಗಿದೆ.
ಇಲ್ಲಿ ನಡೆಯುವ ಇನ್ನೂ ಒಂದು ಮೋಸ ಎಂದರೆ ಉಪ್ಪಿಗೆ ಅಯೋಡಿನ್ ಸೇರಿಸಲು ೨ ಪೈಸೆ ಸಾಕು. ಆದರೆ ಅಯೋಡಿನ್ ಹಾಕಿದ್ದೇವೆ ಎಂದು ಖರ್ಚಿಗಿಂತ ಅನೇಕ ಪಟ್ಟು ಹಣವನ್ನು ಉಪ್ಪು ಮಾರುವ ಕಂಪನಿಗಳು ಜನರಿಂದ ಪೀಕುತ್ತಿವೆ. ಅಯೊಡಿನ್ ಉಪ್ಪಿನ ನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದಿಂದ ಹೊತ್ತೊಯ್ದಿರುವ ಸಂಪತ್ತು ವರ್ಷಕ್ಕೆ ಹದಿನೈದು ಸಾವಿರ ಕೋಟಿ ರೂಪಾಯಿಗಳು! ಹಳ್ಳಿಯ ರೈತರಿಗೆ ರಾಸುಗಳ ಮೇವಿಗಾಗಿ ಕ್ವಿಂಟಾಲ್ಗಟ್ಟಲೆ ಉಪ್ಪು ಬೇಕಾಗುತ್ತದೆ. ತೆಂಗಿನ ಬೆಳೆಗಾಗಿ ನೀರಿಗೆ ಸೇರಿಸಲು ಉಪ್ಪು ಬೇಕಾಗುತ್ತದೆ. ಉಪ್ಪಿನ ಬೆಲೆಯಲ್ಲಿ ಎಂಟು ಪಟ್ಟು ಹೆಚ್ಚಳದಿಂದಾಗಿ ಈ ಬಡರೈತರಿಗೆಲ್ಲಾ ತೊಂದರೆಯಾಗುತ್ತದೆ.
ಅಯೋಡಿನ್ ಸೇರಿಸಲು ಉಪ್ಪನ್ನು ಸಾಕಷ್ಟು ಸಂಸ್ಕರಿಸಬೇಕಾಗುತ್ತದೆ. ಹೀಗೆ ಸಂಸ್ಕರಿಸುವಾಗ ಉಪ್ಪಿನಲ್ಲಿ ಪ್ರಾಕೃತಿಕವಾಗಿ ಇರಬಹುದಾದ ಅನೇಕ ಅಂಶಗಳು ನಾಶವಾಗಿ ಹೋಗುತ್ತವೆ. ಇದರಿಂದ ಉಪ್ಪು ಹೆಚ್ಚು ಕಟುವಾಗುತ್ತದೆ. ಆದ್ದರಿಂದಲೇ ಸಹಜ ಉಪ್ಪಿಗಿಂತ ಸಂಸ್ಕರಿತ ಉಪ್ಪನ್ನು ಅಡಿಗೆಗೆ ಕಡಿಮೆ ಹಾಕುವಂತೆ ಜಾಹೀರಾತು ನೀಡುತ್ತಾರೆ.
ಅಯೋಡಿನ್ ನಮ್ಮ ದೇಹಕ್ಕೆ ನಾವು ತಿನ್ನುವ ತರಕಾರಿ ಹಣ್ಣುಗಳ ಮೂಲಕವೇ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಕರಾವಳಿಯಲ್ಲಿರುವವರಿಗೆ ಅಯೋಡಿನ್ ತಿನ್ನುವ ಅವಶ್ಯಕತೆಯೇ ಇಲ್ಲ. ನಾವು ತಿನ್ನುವ ಸೊಪ್ಪು ತರಕಾರಿಗಳು ಸಾಕಷ್ಟು ಅಯೋಡಿನ್ ಹೊಂದಿರುತ್ತವೆ. ಅಯೋಡಿನ್ ರಹಿತ ಉಪ್ಪು ಲಭ್ಯತೆ ಇಲ್ಲದಿರುವಾಗ ಸೈಂಧವ ಲವಣವನ್ನು ಉಪಯೋಗಿಸಬಹುದು. ಅಯೋಡಿನ್ ಉಪ್ಪಿಗಿಂತ ಇದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಬಹುದು. ಇಲ್ಲವೇ ಉಪ್ಪನ್ನು ತಿನ್ನದಿದ್ದರೆ ಇನ್ನೂ ಒಳ್ಳೆಯದು. ಬೊಜ್ಜೂ ಕಡಿಮೆಯಾಗುತ್ತದೆ.
ಅಯೋಡಿನ್ಯುಕ್ತ ಉಪ್ಪು ಬಹುರಾಷ್ಟ್ರೀಯ ಕಂಪನಿಗಳ ಹಣ ಮಾಡುವ ತಂತ್ರವಲ್ಲದೇ ಇನ್ನೇನೂ ಅಲ್ಲ. ಈ ಉಪ್ಪಿನಲ್ಲಿ ಬೂಸಾ ತಿಂದ ರಾಜಕಾರಣಿಗಳ ಕೈವಾಡವನ್ನೂ ತಳ್ಳಿಹಾಕುವಂತಿಲ್ಲ. ಉಪ್ಪಿನ ಮೇಲಿದ್ದ ಕರವನ್ನು ಬಾಪೂ ದಂಡಿ ಯಾತ್ರೆಯ ಮೂಲಕ ಕಿತ್ತು ಹಾಕಿಸಿದರು. ಈಗ ನಾವು ಅಯೋಡಿನ್ ಮೂಲಕ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಅಯೋಡಿನ್ ಪ್ರಚಾರ ನೀಡಿದಷ್ಟು ಒಳ್ಳೆಯದಲ್ಲ. ಸಾಧ್ಯವಾದಷ್ಟು ಅಯೋಡಿನ್ ರಹಿತ ಉಪ್ಪು ಉಪಯೋಗಿಸಲು ಪ್ರಯತ್ನಿಸಿ ರೋಗಗಳಿಂದ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಬಚಾವಾಗಬಹುದು.
ಲೇಖನವನ್ನು ಬಹಳ ಸೌಮ್ಯ ಭಾಷೆಯಲ್ಲಿ ಬರೆದಿದ್ದೇನೆ. ಆದರೆ ವಿಷಯ ನಾನು ಹೇಳಿದ್ದಕ್ಕಿಂತ ನೂರಾರು ಪಟ್ಟು ಹೆಚ್ಚು ಗಂಭೀರವಾಗಿದೆ. ಅಯೋಡಿನ್ ಬೇಗ ದೂರ ಮಾಡಿದಷ್ಟೂ ಹೆಚ್ಚು ಉಪಯೋಗ ನಮ್ಮ ದೇಹಕ್ಕೆ ಮತ್ತು ದೇಶಕ್ಕೆ ಆಗುತ್ತದೆ.
ಆಕರಗಳು :
1. http://www.petitiononline.com/pil0001/petition.html
೨ http://www.karmayog.org/iodisedsalt/iodisedsalt_3665.htm
೩ http://www.narasan.at/en/berichte/jod.html4. http://www.diagnose-me.com/treat/T26559.
5. http://www.seriouseats.com/2008/06/iodized-salt-good-sources-of-iodine.html
೬. http://www.indiatogether.org/2006/jul/hlt-saltmess.htm
ಗುರುವಾರ, ಏಪ್ರಿಲ್ 23, 2009
ಲಸಿಕೋಪಾಖ್ಯಾನ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ
"ಎನೂ ಕಾಳಜಿ ಮಾಡಬ್ಯಾಡಣ್ಣಾ! ನೀ ಹೇಳೂದು ಖರೆ ಅದ. ವ್ಯಾಕ್ಸಿನ್ ಇಲ್ಲದಂಗ ಮನಿಶ್ಯಾ ಅಗ್ದಿ ಛೊಲೊ ಬದುಕತಾನ. ಎಮ್ಮೆನ್ಸಿಗಳು ಎಲ್ಲಾ ಪಿತ್ತೊರಿ ನಡಿಸಿ ಹಿಂಗ ಬೇಕಬೇಕಾದಂಗ ಔಷಧಿ ಚುಚ್ಚತಾವು. ರೇಬಿಸ್ ವ್ಯಾಕ್ಸಿನ್ ಸೆರೆಬ್ರಲ್ ಎಡಿಮಾ ತಂದು ಇಡತತಿ. ಬೇರೆಯೊರ ಹತ್ರ ರೇಬಿಸ್ ವ್ಯಾಕ್ಸಿನ್ ಹಾಕಿಸ್ಕೆಂಡ ಮೂರು ಮಂದಿ ಒಳಗ ಇಬ್ರಿಗೆ ಸೆರೆಬ್ರಲ್ ಎಡಿಮಾ ಹತ್ತಿದ್ದು ನಾನ ಟ್ರೀಟ್ ಮಾಡೆನಿ. ಮೆಡಿಕಲ್ ರೆಫ಼ರೆನ್ಸ್ ನೆಗೂ ರೇಬೀಸ್ ಸೈಡ್ ಎಫ಼ೆಕ್ಟ್ ಸೆರೆಬ್ರಲ್ ಎಡಿಮಾ ಅಂತ ಅದ. ಎಲ್ಲಾ ನಾಯಿ ಕಚ್ಚಿದ ಕೂಡ್ಲೆಗೆ ವ್ಯಾಕ್ಸಿನ್ ಹಾಕಿಸ್ಕೊಬೇಕಿಲ್ಲ . ನಾಯಿ ಕಂಡಿಶನ್ ನೋಡ್ಬೇಕಾಗ್ತದ. ಪೂರ್ತಿ ಇನ್ಫ಼ೆಕ್ಟೆಡ್ ಅಂತ ಖಾತ್ರಿ ಅದ ಮ್ಯಾಲೆ ವ್ಯಾಕ್ಸಿನ್ ಹಾಕ್ಬಕು. ಆದ್ರು ಸೆರೆಬ್ರಲ್ ಎಡಿಮಾದ ರಿಸ್ಕ್ ಎದ್ದ ಇರ್ತದ. ಮಂದಿಗೆ ಇದು ಗೊತ್ತಿಲ್ಲ. ಯಾವ ನಾಯಿ ಕಚ್ಚಿದ್ರೂ ವ್ಯಾಕ್ಸಿನ್ ಹಾಕಿಸ್ಕೊತಾರ. ಸ್ಟ್ಯಾಟಿಸ್ಟಿಕ್ಸ್ ಹಿಡಕೊಂಡು ನೀ ಬರಿ ಮೆಡಿಕಲ್ ಟೆಕ್ನಿಕಲ್ ವಿಶ್ಯ ನಿಂಗ ಗೊತ್ತಾಗ್ಲಿಕ್ಕಿಲ್ಲ. ನಾ ಅದನ್ನ ಹೇಳಿಕೊಡ್ತೇನಿ" ಎಂದಳು ಚೇತೂ.
" ನೀ ನನ್ನ ಜೋಡಿ ಕೈ ಹಚ್ಚಿದ್ದು ಚದುರಂಗ ಬಲ ಬಂದಂಗಾತು ನೋಡಬೆ. ಖರೆ ಹೇಳಿದ್ರೂ ಜನಾ ಕೇಳಕ ವಲ್ರು. ಡಾಕ್ಟ್ರುಗಳು ಹೇಳಿದ್ರು ಅಂದ ಕೂಡ್ಲೆ ಹಿಂದ ಮುಂದ ನೊಡದಂಗ ನಂಬಿಬಿಡ್ತಾರ. ನೂರು ಸರಿ ಹೇಳಿದ ಸುಳ್ಳು ಹೆಂಗ ಸತ್ಯಾನ ಆಗಿಬಿಡ್ತತಲ್ಲ ಅಂತ ಬ್ಯಾಸರ ಅಷ್ಟ. ಇದರ ಬಗ್ಗೆ ಇಂಟರ್ನೆಟ್ನೆಗೂ ಮಾಹಿತಿ ಸಿಗದಂಗ ಕಾಳಜಿ ತಗೊಂಡಿರ್ತಾರ ಕಂಪನಿಯೊರು!".
ಚೇತನಾ ವೃತ್ತಿಯಿಂದ ವೈದ್ಯೆ. ವರಸೆಯಲ್ಲಿ ನನಗೆ ತಂಗಿಯಾಗಬೇಕು. ಹಳ್ಳಿಗಳಲ್ಲಿ ಉಚಿತ ವೈದ್ಯಕೀಯ ಕ್ಯಾಂಪ್ಗಳನ್ನು ನಡೆಸುವ ಸ್ವಯಂಸೇವಾ ಸಂಸ್ಥೆಯೊಂದರ ನಿಕಟವರ್ತಿ! ನಾನು ಲಸಿಕೆಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಕಂಡು ಮೆಚ್ಚಿದ್ದಳು. ಡಾ.ಕಕ್ಕಿಲಾಯರವರು ಪೋಲಿಯೊ, ನಾಯಿಕೆಮ್ಮು, ಡಿಫ್ಟಿರಿಯ ಧನುರ್ವಾಯುಗಳನ್ನು ಹೊರತುಪಡಿಸಿ ಉಳಿದ ಲಸಿಕೆ ಹಾಕಿಸುವುದು ಸಾಧುವಾಗಲಿಕ್ಕಿಲ್ಲವೆಂದು ಅಭಿಪ್ರಾಯ ಪಡುತ್ತಾರೆ. ಈ ಮೂಲಕ ಚೇತೂ ಬಿಟ್ಟರೆ ನಾನು ನಂಬಿಕೆ ಇಡಬಲ್ಲ ವೈದ್ಯರು ಡಾ.ಕಕ್ಕಿಲಾಯರವರು ಎಂದು ಹೇಳಬಲ್ಲೆ. ಪೋಲಿಯೋ ಲಸಿಕೆ ಹಾಕಿಸುವ ಅವಶ್ಯಕತೆ ಯಾಕೆ ಇಲ್ಲ ಎಂದು ನಾನು ನನ್ನ ಹಿಂದಿನ ಲೇಖನಗಳಲ್ಲಿ ಹೇಳಿದ್ದೇನೆ.
ಲಸಿಕೆಗಳು ಮನುಷ್ಯನ ಆರೋಗ್ಯಪೂರ್ಣ ಬದುಕಿಗೆ ಪ್ರಚಾರವಿದ್ದಷ್ಟು ಪೂರಕವಲ್ಲ ಎಂದು ಪ್ರತಿಪಾದಿಸಿದ್ದೇನೆ. ರೋಗಕ್ಕೆ ಮೂಲ ಕಾರಣ ರೋಗಾಣುಗಳಲ್ಲ. ಬದಲಾಗಿ ’ಟಾಕ್ಸೇಮಿಯಾ’ ದಿಂದ ಉಂಟಾಗುತ್ತದೆ. ಟಾಕ್ಸೇಮಿಯಾ ಅಂದರೆ ದೇಹದಲ್ಲಿ ವಿಷ ಉರವಣಿಸಿದ ಸ್ಥಿತಿ. ಈ ಟಾಕ್ಸೇಮಿಯಾದಿಂದಾಗಿ ರೋಗನಿರೋಧಕತೆ ಕಡಿಮೆಯಾಗಿ ಜೀವಕೊಶಗಳಿಗೆ ಹಾನಿಯಾಗಿ ರೋಗಾಣುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಮಕ್ಕಳಲ್ಲಿ ಟಾಕ್ಸೇಮಿಯಾ ಉಂಟಾಗುವುದಕ್ಕೆ ಬಹುಮುಖ್ಯ ಕಾರಣ ಪೌಷ್ಟಿಕ ಆಹಾರದ ಕೊರತೆ ಮತ್ತು ಶುಚಿತ್ವದ ಕೊರತೆ! ಲಸಿಕೆಗಳ ಕೆಲಸವೆಂದರೆ ದೇಹದ ರೋಗನಿರೊಧಕತೆಯನ್ನು ರೋಗಾಣುಗಳ ವಿರುದ್ಧ ಪ್ರಚೊದಿಸುವುದು. ಅಪೌಷ್ಟಿಕತೆಯಿಂದಾಗಿ ದೇಹದಲ್ಲಿ ವಿಷ ಸೇರಿರುವ ಮಕ್ಕಳಿಗೆ ಯಾವ ಲಸಿಕೆ ಹಾಕಿದರೂ ಪ್ರಯೋಜನವಾಗದು ಎಂದು ಅಮೇರಿಕಾದ ಖ್ಯಾತ ವೈದ್ಯ ಹೆನ್ರಿ ಬೀಲರ್ ತಮ್ಮ " Food is your best Medicine" ಪುಸ್ತಕದಲ್ಲಿ ಹೇಳುತ್ತಾರೆ.
ಲಸಿಕೆಗಳ ಉಪಯುಕ್ತತೆಯ ಅಂಕಿಅಂಶಗಳ ಬಗ್ಗೆ ಎಲ್ಲರೂ ಹೇಳುವ ಜಾಣ ಸುಳ್ಳು ಎಂದರೆ ತಮಗೆ ಬೇಕಾದ ಇಸವಿಯಿಂದ ಆ ಅಂಕಿಅಂಶಗಳನ್ನು ತೆಗೆದುಕೊಳ್ಳುವುದು. ದಡಾರ, ಪೊಲಿಯೊ ಇತ್ಯಾದಿ ರೋಗಗಳು ಕಡಿಮೆಯಾದದ್ದನ್ನು ಐವತ್ತರ ದಶಕದ ನಂತರದ ಅಂಕಿಅಂಶಗಳ ಮೂಲಕ ತೋರಿಸುತ್ತಾರೆ. ಇದೇ ಅಂಕಿಅಂಶಗಳನ್ನು ೧೯೦೦ ರಿಂದ ತೆಗೆದುಕೊಂಡರೆ ಐವತ್ತರ ದಶಕದ ವೇಳೆಗೆ ದಡಾರ, ಪೊಲಿಯೊ, ಟೈಫ಼ಾಯಿಡ್, ಸ್ಕಾರ್ಲೆಟ್ ಜ್ವರ, ಟಿ.ಬಿ, ಪೊಲಿಯೊ, ನಾಯಿಕೆಮ್ಮು ರೋಗಗಳು ಸಾಕಷ್ಟು ಕಡಿಮೆಯಾಗಿದ್ದವು. [೧],[೨][೩]. ಅಂಕಿ ಅಂಶಗಳನ್ನು ಎಲ್ಲೊ ಮಧ್ಯಭಾಗದಿಂದ ನೋಡದೇ ಶತಮಾನದ ಪ್ರಾರಂಭದ ಅಂಚಿನಿಂದ ಅಥವಾ ಹಿಂದಿನ ಶತಮಾನದಿಂದ ನೋಡುವುದು ಸರಿಯಾದ ಮಾರ್ಗ. ಲಸಿಕೆ ಬರುವುದಕ್ಕಿಂತ ಮುಂಚೆಯೆ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಲಸಿಕೆಗಳು ರೋಗಗಳನ್ನು ನಿಯಂತ್ರಣ ಮಾಡಿದವು ಎಂಬುದೆ ಪ್ರಶ್ನಾರ್ಹ.
ಡಾ. ಬಾರ್ಟ್ ಕ್ಲಾಸ್ಸನ್ ರವರು ಇನ್ನೊಂದು ಸಂಶೊಧನೆಯನ್ನು ಮಾಡಿದ್ದಾರೆ.ನಮ್ಮ ದೇಹದೊಳಗೆ ಬೇರೆ ಡಿ.ಎನ್.ಎ ಅಥವಾ ಆರ್.ಎನ್.ಎ ಗಳನ್ನು ಕೃತಕವಾಗಿ ಚುಚ್ಚಿದರೆ ಪರಿಣಾಮಗಳೇನಾಗಬಹುದುದು ಎಂಬುದು ಅವರ ಸಂಶೋಧನೆಯ ವಿಷಯ. ಅವರ ಈ ಸಂಶೋಧನೆಯ ಪ್ರಕಾರ ಲಸಿಕೆಗಳಿಗೂ ಡಯಾಬಿಟಿಸ್ ಗೂ ನೇರ ಸಂಬಂಧವಿದೆ. ಮೊದಲು ಪ್ರಾಣಿಗಳ ಮೇಲೆ ನಡೆಸಿದ ಸಂಶೊಧನೆಯನ್ನು ಮನುಷ್ಯರ ಮೇಲೆಯೂ ವಿಸ್ತರಿಸಿದರು. ದಡಾರದ(measles) ವೈರಸ್ ನ ಆಂಟಿಜೆನಿಕ್ ವಿನ್ಯಾಸ ನಮ್ಮ ಮೇದೊಜೀರಕಾಂಗದ ಜೀವಕೊಶಗಳ(ಬೀಟಾ ಸೆಲ್ಸ್) ಆಂಟಿಜೆನಿಕ್ ವಿನ್ಯಾಸದಂತೆಯೇ ಇದೆ. ನಮ್ಮ ದೇಹಕ್ಕೆ ಲಸಿಕೆ ಹಾಕಿದಾಗ ದಡಾರದ ವೈರಾಣುಗಳ ವಿರುದ್ಧ ತಯಾರಾಗುವ ಆಂಟಿಬಾಡಿಗಳು ನಮ್ಮ ಮೇದೋಜೀರಕಾಂಗದ ಬೀಟಾ ಸೆಲ್ಗಳ ಮೇಲೆ ಧಾಳಿ ಮಾಡುತ್ತವೆ. ಇದು ಇನ್ಸುಲಿನ್ನ ತಯಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಸಿಕೆಗಳ ಸಂಶೊಧನೆಯ ನಂತರ ಡಯಾಬಿಟಿಸ್ನ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಡಾ.ಮರ್ಕೊಲ ರ ಸಂಶೊಧನೆಗಳೂ ಧೃಢಪಡಿಸುತ್ತವೆ. ದಡಾರದ ಲಸಿಕೆ ಹಾಕಿಸಿಕೊಳ್ಳದಿರುವುದರಿಂದ ವಿಶೇಷ ಸಮಸ್ಯೆಗಳು ಉಂಟಾಗವು ಎಂದು ಡಾ.ಕಕ್ಕಿಲಾಯರವರೂ ಹೇಳಿದ್ದಾರೆ.( http://sampada.net/forum/17082)
ಲಸಿಕೆಗಳಿಂದ ಕ್ಯಾನ್ಸರ್ ಶತಶಃ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಕ್ಯಾನ್ಸರ್ ಬಂದಿರುವ ಉದಾಹರಣೆಗಳು ವೈದ್ಯಕಿಯ ಪುಟಗಳಲ್ಲಿ ದಾಖಲಾಗಿವೆ. ಉತ್ತಮ ಆಹಾರ ಮತ್ತು ಜೀವನಶೈಲಿಯಿಂದ ಕ್ಯಾನ್ಸರನ್ನು ತಡೆಗಟ್ಟಬಹುದು ಆದರೆ ಲಸಿಕೆಗಳು ಕ್ಯಾನ್ಸರ್ನ ಬೆಳವಣಿಗೆಗೆ ಅವಕಾಶ ಒದಗಿಸುವ ಸಾಧ್ಯತೆಗಳಿರುತ್ತವೆ. ಈ ಅಂಶಗಳನ್ನು ಡಾ.ವಿನ್ಸೆಂಟ್ ಹಾಗೂ ಡಾ. ಕ್ಲಾರ್ಕ್ ರ ಸಂಶೊಧನೆಗಳು ದೃಢಪಡಿಸಿವೆ[೪].
ಸಿಯಾಟಲ್ ಟೈಮ್ಸ್ನ ಲೇಖನವೊಂದರಲ್ಲಿ ಸಿಡುಬು(small pox) ಲಸಿಕೆ ಹಾಕಿಸದಿರುವುದಕ್ಕೆ ೨೦ ಕಾರಣಗಳು ಎಂಬ ಲೇಖನವು ಪ್ರಕಟವಾಗಿತ್ತು. ಇದರ ಪ್ರಕಾರ ಸಿಡುಬಿನ ಲಸಿಕೆ ಹಾಕಿಸುವುದರಿಂದ ಉಪಯೋಗಕ್ಕಿಂತ ಅಪಾಯಗಳೇ ಹೆಚ್ಚಿದ್ದು ಲಸಿಕೆ ತೆಗೆದುಕೊಳ್ಳಲಿರುವುದೇ ಲೇಸು ಎಂದು ಪ್ರತಿಪಾದಿಸಿದೆ. ಫಿಲಿಪ್ಪಿನ್ಸ್ ನ ಸಾಮೂಹಿಕ ಲಸಿಕೆಯ ಯಶಸ್ವಿ(ಸಿಡುಬಿನ ನಿಯಂತ್ರಣದ ಅಲ್ಲ) ಕಾರ್ಯಕ್ರಮದ ನಂತರ ಡಾ.ಲಿಯೊನ್ ಗ್ರಿಗೊರ್ಸ್ಕಿ "ನಾವೇ ರೋಗಗಳನ್ನು ಸೃಷ್ಟಿಸಿ ನಾವೇ ಅದನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆಗಳನ್ನು ಈ ಪ್ರಮಾಣದಲ್ಲಿ ಉಪಯೋಗಿಸಿ ಕ್ಯಾನ್ಸರೀಕರಣ ಮತ್ತು ಮಿದುಳಿನ ನಿಶ್ಯಕ್ತಿಯ ಕಡೆಗೆ ಜನರನ್ನು ಎಳೆದೊಯ್ಯುತ್ತಿದ್ದೇವೆ." ಎಂದು ಉದ್ಗರಿಸಿದರು[೫]. ಫಿಲಿಪ್ಪಿನ್ಸ್ ನಲ್ಲಿ ಸಿಡುಬು ನಿಯಂತ್ರಣಕ್ಕೆ ಬಂದಿದ್ದು ಅಲ್ಲಿಯ ಅಧಿಕಾರಿಗಳು ಕೈಗೊಂಡ ಸ್ವಚ್ಚತೆ ಹಾಗೂ ಆರೋಗ್ಯವನ್ನು ಉಲ್ಬಣಗೊಳಿಸುವ ಕ್ರಮಗಳಿಂದಲೇ ಹೊರತು ಲಸಿಕೆಯಿಂದ ಅಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇದಲ್ಲದೆ ಸಿಡುಬಿನ ಬಗ್ಗೆ ಇರುವ ಅಂಕಿಅಂಶಗಳು ಸುಳ್ಳು ಹಾಗೂ ತಪ್ಪು ದಾರಿಗೆ ಎಳೆಯುವಂಥವು ಎಂದು ಡಾ.ಅಲ್ಫ಼್ರೆಡ್ ರಸೆಲ್ ವಾಲೆಸ್ ಪ್ರತಿಪಾದಿಸುತ್ತಾರೆ. ಲಸಿಕೆಯ ನಿಜವಾದ ಮರ್ಮಗಳನ್ನು ಅರಿಯಲು ಅಂಕಿಅಂಶ ತಜ್ಞರೇ ಸರಿಯಾದ ಮಾರ್ಗದರ್ಶನ ನೀಡಬಲ್ಲರೇ ಹೊರತು ವೈದ್ಯರುಗಳನ್ನು ಈ ವಿಷಯದಲ್ಲಿ ನಂಬುವ ಹಾಗಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ[೬].
ಸಮುದಾಯ ಆರೊಗ್ಯ ಸಾಮೂಹಿಕ ಆರೊಗ್ಯ ಇತ್ಯಾದಿಗಳನ್ನು ಕೇಳುತ್ತಲೇ ಇದ್ದೇನೆ. ಒಟ್ಟಾಗಿ ಎಲ್ಲರಿಗೂ ಲಸಿಕೆ ಚುಚ್ಚುವುದೇ ಸರ್ವಜನಿಕ ಆರೊಗ್ಯ ಎಂಬುದನ್ನು ಒಪ್ಪಲು ನನಗೆ ಸಾಧ್ಯವಾಗುತ್ತಿಲ್ಲ. ಸಾಮೂಹಿಕವಾಗಿ ಆರೋಗ್ಯವನ್ನು ಪ್ರತಿಪಾದಿಸಬೇಕಾದರೆ ಸ್ವಚ್ಛತೆ, ಪೌಷ್ಟಿಕ ಆಹಾರ, ವ್ಯಾಯಾಮ ಇಂಥವುಗಳ ಬಗ್ಗೆ ಗಮನ ಹರಿಸಬೇಕು ಎಂದು ನನಗನ್ನಿಸುತ್ತದೆ. ಸುಮ್ಮಸುಮ್ಮನೇ ಸಾಮುದಾಯ ಆರೋಗ್ಯದ ಹೆಸರಿನಲ್ಲಿ ಒಂದೇ ಸಾರಿಗೆ ಸಾವಿರಾರು ಮಕ್ಕಳ ಪೂರ್ವಾಪರ ಪರೀಕ್ಷೆಗಳಿಲ್ಲದೇ ಲಸಿಕೆಗಳನ್ನು ಸುರಿಯುವುದು ಎಷ್ಟರ ಮಟ್ಟಿಗೆ ಸಾಧು ಎಂಬುದು ನನ್ನ ಪ್ರಶ್ನೆ. ಪ್ರತಿ ಲಸಿಕೆಯನ್ನು ಕೊಡುವ ಮುಂಚೆ ಅಲರ್ಜಿ ಮತ್ತು ಆ ಮಗು ಲಸಿಕೆಯ ಅಡ್ಡ ಪರಿಣಾಮಗಳನ್ನು ತಡೆದುಕೊಳ್ಳುವಷ್ಟು ಸಮರ್ಥವೇ ಎಂದು ಪರೀಕ್ಷಿಸಬೇಕಾಗುತ್ತದೆ. ರಾಜಕೀಯ ದುರುದ್ದೇಶಗಳಿಂದ ಕೂಡಿದ ಇಂತಹ ಸಾಮೂಹಿಕ ಲಸಿಕೆಯ ಕಾರ್ಯಕ್ರಮಗಳಲ್ಲಿ ಯಾವ ಪರೀಕ್ಷೆಯನ್ನೂ ನಡೆಸಲಾಗುವುದಿಲ್ಲ. ಎಲ್ಲಾ ಮಕ್ಕಳು ಲಸಿಕೆಗಳಿಗೆ ಸಮಾನವಾಗಿ ಸ್ಪಂದಿಸುವುದಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿ ನೀಡುವ ಸಾಮೂಹಿಕ ಲಸಿಕೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೂ ಪ್ರಶ್ನಿಸತಕ್ಕದ್ದೆ! ರೋಗಗಳ ಬಗ್ಗೆ ಜನರಲ್ಲಿರುವ ಅತಿಯಾದ ಭೀತಿಯ ಕಾರಣ ನಮ್ಮ ಮಕ್ಕಳು ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಬೇಕಾಗಿದೆ. ವೈದ್ಯರುಗಳಾದರೋ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಬದಲಾಗಿ ಇದು ರಾಜಕೀಯ ರಾಜಕಾರಣಿಗಳನ್ನು ಕೇಳಿ ಎಂದು ಕೈ ತಿರುವಿಬಿಡುತ್ತಾರೆ. ಸಣ್ಣ ಕಾರಣಕ್ಕೂ ಬ್ರುಫ಼ಿನ್ ನಂತಹ ಅಪಯಕಾರಿ ಗುಳಿಗೆಯನ್ನು ಬರೆಯುವುದು. ಅಯೋಡಿನ್ ಉಪ್ಪನ್ನು ಬಳಸಿ ಎಂದು ಒತ್ತಾಯಿಸುವುದು[೭] ಇವೆಲ್ಲಾ ವೈದ್ಯರುಗಳು ಬಹುರಾಷ್ಟ್ರೀಯ ಕಂಪನಿಗಳ ಕೈವಶವಾಗಿರುವುದನ್ನು ತೋರಿಸುತ್ತದೆ. ತಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳುವುದಕ್ಕಾಗಿ ನಮ್ಮ ಮಕ್ಕಳ ಜೀವನದ ಜೊತೆ ಆಡುವುದರ ಇಂತಹ ವೈದ್ಯರುಗಳಿಗೆ ಧಿಕ್ಕಾರವಿರಲಿ.
ಎಲ್ಲ ಕಡೆಯೂ ಹಣ ಪ್ರಾಣ ಹೀರುವ ಖೂಳ ತಿಗಣೆಗಳೇ ತುಂಬಿರುವಾಗ ನಮ್ಮ ಮಕ್ಕಳನ್ನು ಬಹುರಾಷ್ಟ್ರೀಯ ಕಂಪನಿಗಳ ದುಷ್ಟ ಜಾಲದಿಂದ ಪಾರು ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ತೊಲಗುವವರೆಗೂ ನಮ್ಮನ್ನು ರಕ್ಷಿಸುವುದು ಸ್ವತಃ ನಮ್ಮ ಅರಿವು! ಹಿಂದೆ ಮುಂದೆ ವಿಚಾರ ಮಾಡದೇ ವೈದ್ಯರು ಹೇಳಿದರೆಂಬ ಕಾರಣಕ್ಕೆ ಕಂಡ ಕಂಡ ಲಸಿಕೆಗಳನ್ನೆಲ್ಲಾ ಹಾಕಿಸಿಕೊಳ್ಳುವುದು ದೂರಗಾಮಿ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲದು.
ಆಕರಗಳು:
1. http://www.vaccinationdebate.com/web1.html
೨.http://www.whale.to/m/statistics.
3.http://www.whale.to/vaccine/mckinlay.pdf
೪..http://www.mercola.com/article/vaccines/immune_suppression.html
೫.http://articles.mercola.com/sites/articles/archive/2008/01/02/was-smallpox-vaccine-really-a-great-success.aspx
ಲಸಿಕೆ ಎಂಬ ಮಹಾವಿಶ -೨
ಡಾ.ಸೈಡನ್ಹ್ಯಾಮ್ ರವರ ಪ್ರಕಾರ ವೈದ್ಯರು ಹಾಗೂ ದಾದಿಯರ ಕುತಂತ್ರವಿಲ್ಲದಿದ್ದರೆ ಸಿಡುಬು ಅಪಾಯರಹಿತ ಹಾಗೂ ಲಘು ರೋಗವಾಗಿದೆ. ಸಿಡುಬು ದೇಹದಲ್ಲಿನ ವಿಷವನ್ನು ಬೆವರು, ಗುಳ್ಳೆಗಳ ಕೀವು, ಮೂತ್ರದ ಮೂಲಕ ವಿಷವನ್ನು ಹೊರಹಾಕುತ್ತದೆ. ಆದ್ದರಿಂದಲೇ ಸಿಡುಬು ಬಂದವರಿಗೆ ಹೆಚ್ಚಾಗಿ ನೀರಡಿಕೆಯಾಗುವುದು! ಸಿಡುಬಿನಿಂದ ದೂರವಿರುವ ಮಾರ್ಗವೆಂದರೆ ಉತ್ತಮ ಆಹಾರ, ವಿಹಾರ, ಶುಚಿತ್ವ!
ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮಗಳ ಔಚಿತ್ಯದ ಹಿಂದೆ ಒಂದು ತರ್ಕಬದ್ಧವಾದ ಪ್ರಶ್ನೆಯಿದೆ. ವಿಶ್ವದ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಹವಾಮಾನ, ಆಹಾರ ಪದ್ಧತಿ, ವಾತಾವರಣ ಇರುತ್ತವೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಎಲ್ಲರಿಗೂ ಒಂದೇ ರೀತಿಯ ಲಸಿಕೆ ಹಾಕುವುದು ಸರಿಯೇ ? ಸಾಮೂಹಿಕ ಲಸಿಕೆ ಹಾಕುವ ಮುಂಚೆ ಆಯಾ ಪ್ರದೇಶದಲ್ಲಿ ಆಯಾ ವಾತಾವರಣಕ್ಕೆ ಪರೀಕ್ಷೆ ಮಾಡಲಾಗಿರುತ್ತದೆಯೇ ? ಜೊತೆಗೆ ಕೆಲವು ಲಕ್ಷಣಗಳಿದ್ದರೆ ಆ ಲಕ್ಷಣಗಳಿಗೆ ಹೊಂದದಂತಹ ಲಸಿಕೆ ಕೊಡಬಾರದು ಎಂಬುದು ಅಮೇರಿಕಾ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ನ ನಿಯಮ. ಸಾಮೂಹಿಕ ಲಸಿಕೆ ಕೊಡುವಾಗ ಈ ನಿಯಮ ಸಹಜವಾಗಿಯೇ ಗಾಳಿಯಲ್ಲಿ ತೂರಿಹೋಗುತ್ತದೆ. ಈ ಕಾರಣದಿಂದಾದರೂ ಕನಿಷ್ಟ ಪಕ್ಷ ಸಾಮೂಹಿಕ ಲಸಿಕೆಯಿಂದಾದರೂ ದೂರವಿರುವುದು ಉತ್ತಮ ಎನ್ನಿಸುತ್ತದೆ.
ವ್ಯಾಕ್ಸಿನ್ಗಳ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಔಷಧಗಳನ್ನು ಹಂಚುವುದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿರುವುದು ಹಾಗೂ ಇದಕ್ಕೆ ವೈದ್ಯರುಗಳ (ಎಲ್ಲಾ ವೈದ್ಯರುಗಳದಲ್ಲ), ಸರ್ಕಾರದ ಪ್ರತಿನಿಧಿಗಳ ಸಹಕಾರವಿರುವುದನ್ನು ನಾವು ಶಂಕಿಸಬಹುದು. ಮೊನ್ನೆ ಗೆಳೆಯ ಷಡಕ್ಷರಮೂರ್ತಿಯವರು ಜೆನೆರಿಕ್ ಔಷಧಿಗಳು ಮತ್ತು ಆರ್.ಎಂ.ಜಿ ವೈದ್ಯರುಗಳು ಕೊಡುವ ಔಷಧಿಗಳ ಬಗ್ಗೆ ವಿವರಿಸುತಿದ್ದರು. ಇದರ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೆನೆ. ಅನೇಕ ದೇಶಗಳಲ್ಲಿ ನಿರ್ಬಂಧಿಸಲಾದ ಔಷಧಿಗಳು ಅಥವಾ ಔಷಧಿ ತಯಾರಿಕೆಯ ರಾಸಾಯನಿಕಗಳು ನಮ್ಮ ದೇಶದಲ್ಲಿ (ಉದಾ: ಇರ್ಲೋಪೆನ್, ಮೈಗ್ರಿಲ್, ಸಿಪ್ಟೊಮೆಟ ಇತ್ಯಾದಿ) ಬಿಕರಿಯಾಗುತ್ತಿವೆ. ಇದರಲ್ಲಿ ಕೆಲವನ್ನು ವೈದ್ಯರುಗಳ ಸಲಹೆ ಇಲ್ಲದೆ ತೆಗೆದುಕೊಳ್ಳಬಹುದು( ಉದಾ: ಮಾಲಾ-ಡಿ. ಇದು ಬೇರೆ ದೇಶದಲ್ಲಿ ಬೇರೆ ಹೆಸರಿನಿಂದ ಮಾರಾಟವಾಗುತ್ತಿತ್ತು!). ದುರಂತವೆಂದರೆ ಬಾಂಗ್ಲಾದೇಶ, ನೇಪಾಳದಂತಹ ರಾಷ್ಟ್ರಗಳೂ ದಿಟ್ಟತನದಿಂದ ನಿರ್ಬಂಧಿಸಿದ ರೆಸ್ಟಿಲ್, ಕಾಮ್ಸ್ಲಿಪ್ ನಂತಹ ಗುಳಿಗೆಗಳು ಭಾರತದಲ್ಲಿ ಬಳಕೆಯಲ್ಲಿವೆ! ಏಡ್ಸ್ ಔಷಧಿ, ಗರ್ಭನಿರೋಧಕ, ಕಾಂಡೊಮ್ ಬಿಕರಿಯಲ್ಲೂ ಕೆಲವು ಕುತಂತ್ರಗಳನ್ನು ತಳ್ಳಿ ಹಾಕುವಂತಿಲ್ಲ. ಪ್ರಾಸೆಸ್ ಪೇಟೆಂಟ್ ಬಿಟ್ಟು ಪ್ರಾಡಕ್ಟ್ ಪೇಟೆಂಟ್ ಅನ್ನು ಅಪ್ಪಿಕೊಂಡದ್ದು ಭಾರತ ಮಾಡಿದ ಅತ್ಯಂತ ಘೋರ ತಪ್ಪುಗಳಲ್ಲೊಂದು. ಇದು ನೇರವಾಗಿ ಔಷಧಿಗಳ ಏಕಸಾಮ್ಯವನ್ನು ದೊಡ್ಡ ದೊಡ್ಡ ಕಂಪನಿಗಳ ಕೈಯಲ್ಲಿ ಇಡುತ್ತದೆ. ಇದಲ್ಲದೇ ಬೇರೆ ಬೇರೆ ದೇಶದಲ್ಲಿ ಔಷಧಿಗಳು ಬೇರೆಬೇರೆ ಹೆಸರಿನಲ್ಲಿರುವುದರಿಂದ ಜನರಿರಲಿ ಡಾಕ್ಟರ್ ಗಳೇ ದಾರಿತಪ್ಪುವ ಹಾಗಾಗುತ್ತದೆ. ಆದ್ದರಿಂದ ಕಂಟೆಂಟ್ಗಳ ಅಧ್ಯಯನ ಮಾಡಬೇಕಾಗುತ್ತದೆ.
ನನ್ನ ಸ್ನೇಹಿತ ಸಂಪತ್ ಗೆ ಅಪಘಾತವಾಗಿ ಕಾಲು ಕೈಗಳಲ್ಲಿ ಆಳವಾದ ಗಾಯಗಳಾಗಿದ್ದವು. ವೈದ್ಯರು ಆಂಟಿ ಟೆಟಾನಸ್ ಸೂಜಿ ಚುಚ್ಚಿಸಿಕೊಳ್ಳಲು ಸಲಹೆ ಮಾಡಿದರು. ನಾನು ಲಸಿಕೆ ತರಲು ಮುಂದಾದಾಗ ನನ್ನನ್ನು ತಡೆದು ಸಂಪತ್ ಹೇಳಿದರು "ಲೋ ನಿಂಗೆ ತಲೆ ಕೆಟ್ಟಿದೆಯೇನೋ? ಏನೂ ಆಗಲ್ಲ ಹೆದರ್ಕೊಬೇಡ. ಗಾಳೀಲಿ ಬೇರೆ ಬೇರೆ ರೋಗ ತರೋ ನೂರಾರು ರೋಗಾಣುಗಳು ತೇಲಾಡ್ತಿರ್ತವೆ. ಯಾವುದ್ಯಾವುದಕ್ಕೆ ಅಂತ ಸೂಜಿ ಚುಚ್ಚಿಸ್ಕೊತಿಯ? ಮೈ ಎಲ್ಲಾ ತೂತಾಗಿ ಹೋಗುತ್ತೆ ಅಷ್ಟೇ!!". ಸ್ವಲ್ಪವೇ ಸಮಯದಲ್ಲಿ ಸಂಪತ್ ಚೇತರಿಸಿಕೊಂಡರು. ಈಗ ಸುಖವಾಗಿ ಬದುಕುತ್ತಿದ್ದಾರೆ. ಅಂದ ಹಾಗೆ ಸಂಪತ್ ಸ್ನಾತಕೋತ್ತರ ಬಯೋಮೆಡಿಕಲ್ ಇನ್ಸ್ಟ್ರುಮೆಂಟೇಶನ್ನಲ್ಲಿ ಬಂಗಾರದ ಪದವಿ ಪಡೆದಿರುವವರು!
ಮಂಗಳವಾರ, ಮಾರ್ಚ್ 24, 2009
ಲಸಿಕೆ ಎಂಬ ಮಹಾವಿಷ!
ಲಸಿಕೆಗಗಾಗಿ ಬಳಸಲಾಗುವ ವೈರಾಣುಗಳನ್ನು ಅಂಗಾಂಶಗಳಿಂದ ಬೇರ್ಪಡಿಸುವುದು ಹಾಗೂ ಸಂಸ್ಕರಿಸುವುದು ಅತ್ಯಂತ ಜಟಿಲ ಕೆಲಸ. ಇದಕ್ಕಾಗಿ ವಿವಿಧ ರಾಸಾಯನಿಕ ಸಂಸ್ಕಾರಕಗಳನ್ನು ಸಂಸ್ಕರಣೆಗಾಗಿ ಬಳಸಲಾಗುತ್ತದೆ. ಈ ಸಂಸ್ಕಾರಕಗಳು ಮಾನವ ದೇಹಕ್ಕೆ ಎಷ್ಟು ಸುರಕ್ಷಿತ ಎಂಬುದಕ್ಕೆ ಧನಾತ್ಮಕ ಉತ್ತರಗಳಿಲ್ಲ. ಬೀಟಾ-ಪ್ರೊಪಿಯೊಲೊಕ್ಟೇನ್, ಬೋರಾಕ್ಸ್, ಅಲುಮಿನಿಯಮ್ ಹೈಡ್ರಾಕ್ಸೈಡ್, ಸಲ್ಫೇಟ್, ಫಾಸ್ಫೇಟ್ಗಳು ಇತ್ಯಾದಿ ೫೦ ಕ್ಕೂ ಹೆಚ್ಚು ರಸಾಯನಿಕಗಳು ಈ ಪಟ್ಟಿಯಲ್ಲಿವೆ. ಇವುಗಳ ಜೊತೆಗೆ ಪ್ರಾಣಿಗಳ, ಪಕ್ಷಿಗಳ ಅಂಗಾಂಶಗಳು ಹಾಗೂ ಅಂಗಗಳು!!!
ಈ ರೀತಿ ಬೆಳೆಸಿದ ವೈರಾಣುಗಳನ್ನು ಲಸಿಕೆ ತಯಾರಿಕೆಗಾಗಿ ಎರಡು ರೀತಿಯಲ್ಲಿ ಬಳಸಲಾಗುತ್ತದೆ. ಮೊದಲನೆಯದು ಲೈವ್ ವ್ಯಾಕ್ಸಿನ್ಗಳು. ಅಂದರೆ ವೈರಾಣುಗಳನ್ನು ಅರ್ಧಂಬರ್ಧ ಸಾಯಿಸಿ ತಯಾರಿಸಲಾಗುತ್ತದೆ. ಎರಡನೆಯದು ವೈರಾಣುಗಳನ್ನು ಸಂಪೂರ್ಣವಾಗಿ ಸಾಯಿಸಿ ತಯಾರಿಸುವ ಕಿಲ್ಡ್ ಅಥವಾ ಡೆಡ್ ವ್ಯಾಕ್ಸಿನ್. ಈ ರೀತಿಯ ಕೊಟ್ಯಂತರ ವೈರಾಣುಗಳಿಂದ ನೂರಾರು ರಸಾಯನಿಕಗಳಿಂದ ತಯಾರಾದ ಅರೆದ್ರವ ರೂಪದ ಲಸಿಕೆಯನ್ನು ’ಬಲ್ಕ್’ ಎನ್ನುತ್ತಾರೆ. ಕೆಲವೊಮ್ಮೆ ಎರಡು ಮೂರು ರೀತಿಯ ಬಲ್ಕ್ ಗಳನ್ನು ಸೇರಿಸಿ ವ್ಯಾಕ್ಸಿನ್ ಗಳನ್ನು ತಯಾರಿಸಲಾಗುತ್ತದೆ. ಲಸಿಕೆಗಳನ್ನು ಸಂಗ್ರಹಿಸುವುದು ಇನ್ನೂ ಕಷ್ಟದ ಕೆಲಸ. ನಿರಂತರವಾಗಿ ಅವುಗಳನ್ನು ೨ ರಿಂದ ೮ ಡಿಗ್ರೀ ಉಷ್ಣಾಂಶದೊಳಗೆ ಇಟ್ಟಿರಬೇಕು. ದೇಶದಿಂದ ದೇಶಕ್ಕೆ ಸಾಗಿಸುವಾಗ ಇನ್ನೂ ಕಷ್ಟ. ಸಂಗರಹಣಾ ಸಮಯದಲ್ಲಿ ಸಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ. ಇದೆಲ್ಲಾ ಹಂತಗಳನ್ನು ದಾಟಿ ಲಸಿಕೆ ತಯಾರಿಸಲು ಬೇಕಾಗುವುದು ಒಂದರಿಂದ ಒಂದೂವರೆ ವರ್ಷಗಳು!
ವ್ಯಾಕ್ಸಿನೇಷನ್ಗಳನ್ನು ಸಂರಕ್ಷಿಸಲು ತೈಮರೊಸಾಲ್ ಎಂಬ ರಾಸಾಯನಿಕ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಈ ತೈಮರೊಸಾಲ್ ನ್ನು ಪಾದರಸದಿಂದ ತಯಾರಿಸಲಗುತ್ತದೆ. ಪಾದರಸ ವಿಶ್ವದ ಎರಡನೆಯ ಅತಿ ಘೋರ ವಿಷ! ನಮ್ಮ ಮಕ್ಕಳಿಗೆ ಕೊಡುವ ಹದಿನೆಂಟು ಲಸಿಕೆಗಳ ಪೈಕಿ ೧೨ ಲಸಿಕೆಗಳು ತೈಮೊರೊಸಾಲ್ನ್ನು ಹೊಂದಿರುತ್ತವೆ. ಇದರಲ್ಲಿ ೦.೦೦೦೨ ಗ್ರಾಂ ಪಾದರಸವಿರುತ್ತದೆ. ನೂರು ಲೀಟರ್ ನೀರಿನಲ್ಲಿ ೦.೦೦೦೨ ಗ್ರಾಂ ಪಾದರಸ ಕುಡಿಯಲು ಯೋಗ್ಯವಲ್ಲ. ದೊಡ್ಡವರಿಗೇ ಅಪಾಯಕಾರಿಯಾದ ಮಟ್ಟದ ಪಾದರಸವನ್ನು ೨ ವರ್ಷಗಳಿಗಿಂತ ಚಿಕ್ಕ ಹಸುಳೆಗಳಿಗೆ ನೀಡುತ್ತಿದ್ದೇವೆ. (ಕ್ರೌರ್ಯ ನಂ. ೩) (ಆಕರ: ಡಾ.ಬಾಯ್ಡ್ ಹ್ಯಾಲಿ) ಅನೇಕ ಸಂಘಸಂಸ್ಥೆಗಳ ಒತ್ತಾಯದಿಂದ ಪಾದರಸಯುಕ್ತ ಲಸಿಕೆ ತಯಾರಿಸುವುದನ್ನು ೨೦೦೦ ನೇ ಇಸವಿಯಲ್ಲಿ ನಿಷೇಧಿಸಲಾಯಿತು. ಕಂಪನಿಗಳು ಇದನ್ನು ಒಪ್ಪಿ ಸಹಿ ಹಾಕಿದ್ದರೂ ಇಂದಿಗೂ ಉತ್ಪಾದನೆ ನಿಂತಿಲ್ಲ. (ಡಲ್ಲಾಸ್ನ ಪತ್ರಕರ್ತ ವಲೇರಿ ವಿಲ್ಲಿಯಮ್ಸ್ರ ವರದಿ).
ಬ್ರಿಟಿಷ್ ಮೆಡಿಕಲ್ ಜರ್ನಲ್ ನಡೆಸಿದ ಸರ್ವೆಯಲ್ಲಿ ಶೇ.೫೦ ಕ್ಕೂ ಹೆಚು ವೈದ್ಯರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನಿರಾಕರಿಸಿದರು (ಜ.೨೭, ೧೯೯೦)ನಂ.೨, ೨೦೦೦ ರಂದು ಸೆಂಟ್ ಲೂಯಿಸ್ನಲ್ಲಿ ನಡೆದ ಅಮೇರಿಕಾದ ವೈದ್ಯ ಹಾಗೂ ಸರ್ಜನ್ಗಳ ಸಂಘದ ೫೭ ನೆಯ ವಾರ್ಷಿಕ ಸಭೆಯಲ್ಲಿ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಕಡ್ಡಾಯ ಮಾಡುವುದರ ಪರವಾಗಿ ಒಂದೇ ಒಂದು ಮತ ಬೀಳಲಿಲ್ಲ!
೧೯೫೫ ರಲ್ಲಿ ಡಾ.ಝೊನಾಸ್ ಸಾಕ್ ಪೊಲಿಯೊ ಲಸಿಕೆ ಕಂಡು ಹಿಡಿದರು. ತಾವು ಸತ್ತ ಪೊಲಿಯೊ ವೈರಸ್ ಗಳಿಂದ ತಯಾರಿಸಿದ ಪೋಲಿಯೋ ಲಸಿಕೆ ಪರಿಣಾಮಕಾರಿಯಾಗಿಲ್ಲ ಅಲ್ಲದೇ ಮಕ್ಕಳಿಗೆ ಮಾರಕವೂ ಕೂಡ ಎಂದು ಹೇಳಿದ್ದರು. ಮಕ್ಕಳಿಗೆ ಈ ಲಸಿಕೆಯನ್ನು ಕೊಟ್ಟಾಗ ಎರಡು ಮೂರು ವಾರ ಸರಿಯಾಗಿ ನಿದ್ದೆ ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ಇದನ್ನು ಈಗಲೂ ನಾವು ಗಮನಿಸಬಹುದು.
ಈಗ ಅಂಕಿಅಂಶಗಳ ಬಗ್ಗೆ ನೋಡೋಣ. ೧೯೮೬ ರಲ್ಲಿ ಅಮೇರಿಕಾ ಸರ್ಕಾರ ’ನ್ಯಾಷನಲ್ ಚೈಲ್ಡ್ಹುಡ್ ವ್ಯಾಕ್ಸಿನ್ ಇಂಜುರಿ ಕಾಂಪೆನ್ಸೇಷನ್ ಆಕ್ಟ್’ ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯಡಿಯಲ್ಲಿ ಮಕ್ಕಳ ಮೇಲೆ ಲಸಿಕೆಗಳ ಕಾರಣದಿಂದ ಉಂಟಾದ ದುಷ್ಪರಿಣಾಮಗಳ ವಿವರಗಳನ್ನು ಸಂಗ್ರಹಿಸಲಾಯಿತು. ಈ ಕಾಯ್ದೆಯಡಿ ಪ್ರತೀ ವರ್ಷ ೧೧,೦೦೦ ಪ್ರಕರಣಾಗಳು ದಾಖಲಾಗುತ್ತವೆ. ೧೦೦ ರಿಂಡ ೨೦೦ ಸಾವಿನ ಪ್ರಕರಣಾಗಳು ದಾಖಲಾಗುತ್ತವೆ. ಬಾಯಿಯ ಮೂಲಕ ಕೊಡಲಾಗುವ ಓರಲ್ ಪೋಲಿಯೋ ವ್ಯಾಕ್ಸಿನ್ (ಓ.ಪಿ.ವಿ) ನಿಂದಾಗಿ ದಾಖಲಾದ ದುಷ್ಪರಿಣಾಮಗಳ ಸಂಖ್ಯೆ ೭,೪೩೨, ಗಂಭೀರ ಪರಿಣಾಮಗಳ ಸಂಖ್ಯೆ ೧೩೧೫ ಹಾಗೂ ಸವುಗಳ ಸಂಖ್ಯೆ ೩೨೩! ತಜ್ಞರ ಪ್ರಕಾರ ಇಲ್ಲಿ ದಾಖಲಾಗುವ ಸಂಖ್ಯೆ ಒಟ್ಟು ಪರಿಣಾಮದ ಶೇ.೧೦ ರಷ್ಟು ಹಾಗೂ ಸಾವಿನ ಶೇ.೧ ರಷ್ಟು ಮಾತ್ರ ದಾಖಲಾಗುತ್ತವೆ. ಹಾಗಿದ್ದಾಗ ಒಟ್ಟು ಸಂಖ್ಯೆ ಎಷ್ಟಿರಬಹುದು ಊಹಿಸಿ. ಇನ್ನೂ ಒಂದು ವಿಚಾರವೆಂದರೆ ತನ್ನ ದೇಶದ ಪ್ರತಿ ಪ್ರಜೆಯ ವಯಕ್ತಿಕ ಅರೋಗ್ಯಕ್ಕೆ ಗಮನ ಕೊಡುವ ಅಮೇರಿಕದಂತಹ ದೇಶದಲ್ಲೇ ಹೀಗಿರಬೇಕಾದರೆ ಜೀವಕ್ಕೊಂದು ಬೆಲೆಯೇ ಇಲ್ಲದಂತೆ ದಿನವೂ ಸಹಸ್ರ ಸಂಖ್ಯೆಯಲ್ಲಿ ಸಾಯುವ ನಮ್ಮ ದೇಶದಲ್ಲಿ ಹೇಗಿರಬೇಕು ಊಹಿಸಿ.(ಅಂಕಿ ಅಂಶಗಳು: ಸಿಟಿಜನ್ಸ್ ಫ಼ಾರ್ ಹೆಲ್ತ್ ಕೇರ್ ಫ್ರೀಡಮ್, ಫ಼ೂಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಡೈಲಿ ಎಕ್ಸ್ಪ್ರೆಸ್.) ಈ ಕಾಯ್ದೆ ಜಾರಿಗೆ ಬಂದ ನಂತರ ೨,೬೦೦ ಕ್ಕೂ ಹೆಚ್ಚು ತೊಂದರೆಗೊಳಗಾದ ಮಕ್ಕಳ ತಂದೆ ತಾಯಿಗಳಿಗೆ ಪರಿಹಾರ ಧನವನ್ನು ನೀಡಲಾಗಿದೆ. (ದಿ ವೈನ್ ಮತ್ತು ಡೈಲಿ ಎಕ್ಸ್ಪ್ರೆಸ್ಸ್ ವರದಿಗಳು). ಲಸಿಕೆ ಹಾಕಿಸಿದ ನಂತರವೂ ಮಗು ಅದೇ ರೋಗದಿಂದ ತೀರಿಕೊಂಡರೆ ಅಪ್ಪ ಅಮ್ಮಂದಿರು ಲಸಿಕೆಯ ದುಷ್ಪರಿಣಾಮದಿಂದ ಖಾಯಿಲೆ ಉಂಟಾಗಿರಬಹುದು ಎಂಬ್ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಇನ್ನು ಒಂದೆರಡು ಡೋಸ್ ಹಾಕಿಸಬೇಕಿತ್ತೇನೋ ಎಂದುಕೊಳ್ಳುತ್ತಾರೆ. ಇದಕ್ಕೆ ಡಾಕ್ಟರ್ಗಳೂ ಇಂಬು ಕೊಡುತ್ತಾರೆ. ಇನ್ನು ಮುಂದೆ ಲಸಿಕೆ ಹಾಕಿಸಿದ ಮೇಲೆ ಈ ರೋಗ ಬರುವುದಿಲ್ಲ ಎಂದು ವಾಯಿದೆ ಬರೆದುಕೊಡಿ ಎಂದು ಲಸಿಕೆ ಹಾಕಿದ ವೈದ್ಯರನ್ನು ಕೇಳಿ. ಬರೆದುಕೊಟ್ಟರೆ ಸಂತೋಷ. ಬರೆದುಕೊಡದಿದ್ದರೆ .....
ಪೋಲಿಯೊ ಬಗ್ಗೆ ಇದಲ್ಲದೆ ಇನ್ನು ಕೆಲವು ವಿಷಯಗಳಿವೆ. ಡಿ.ಡಿ.ಟಿ ಯಂತಹ ವಿಷಕಾರಕ ರಸಾಯನಿಕಗಳಿಂದಲೂ ಪೋಲಿಯೊ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳಿಗೆ ವಿರುದ್ಧವಾಗಿ ಲಸಿಕೆ ಯಾವುದೇ ಸಹಾಯ ಮಾಡುವುದಿಲ್ಲ.(ಡಾ.ಮಾರ್ಟಾನ್ ಬಿಸ್ಕಿಂಡ್). ಅಮೇರಿಕಾ ಸರ್ಕಾರೀ ಸ್ವಾಮ್ಯದ ಸಿ.ಡಿ.ಸಿ ಬಿಡುಗಡೆ ಮಾಡಿರುವ ಪಿಂಕ್ ಬುಕ್ ನಲ್ಲಿ ಪೋಲಿಯೋದ ಬಗ್ಗೆ ಹೀಗೆ ವಿವರಿಸುತ್ತಾರೆ. ಶೇ.೯೫ ರಷ್ಟು ಕೇಸ್ಗಳಲ್ಲಿ ಪೋಲಿಯೋ ವೈರಸ್ ಧಾಳಿ ಮಾಡಿರುವುದು ಗೊತ್ತಾಗುವುದೂ ಇಲ್ಲ! ಸುಮ್ಮನೆ ವೈರಸ್ಗಳು ಬಂದು ಹೋಗುತ್ತವೆ. ಶೇ.೪ ರಿಂದ ೬ ರ ವರೆಗಿನ ಕೇಸ್ಗಳಲ್ಲಿ ಒಂದು ವಾರದ ಮಟ್ಟಿಗೆ ಪೋಲಿಯೊ ಜ್ವರದ ರೂಪದಲ್ಲಿ ಇದ್ದು ಹೋಗುತ್ತದೆ. ಉಳಿದ ಶೇ.೧ ರಿಂದ ೨ರಷ್ಟು ಕೇಸ್ಗಳಲ್ಲಿ ಕತ್ತು ಮತ್ತು ಬೆನ್ನು ಹರಿಯುವಂತಹ ನೋವು ಬಂದು ಒಂದು ವಾರದಿಂದ ಹತ್ತು ದಿನಗಳ ಮಟ್ಟಿಗೆ ಇದ್ದು ನಂತರ ಗುಣವಾಗುತ್ತದೆ. ಉಳಿದ ಕೊನೆಯ ೧% ಕೇಸ್ಗಳಲ್ಲಿ ಪಾರ್ಶ್ವವಾಯು ತಗುಲುತ್ತದೆ. ಈ ಪಾರ್ಶ್ವವಾಯು ತಗುಲಿದವರಲ್ಲಿ ಶೇ.೨ ರಿಂದ ೩ ಕೇಸ್ಗಳಲ್ಲಿ ಸಾವು ಸಂಭವಿಸುತ್ತದೆ. ಅಂದರೆ ಪೋಲಿಯೋ ವೈರಸ್ ಧಾಳಿ ಮಾಡಿದರೆ ಶೇ.೯೯.೫ ಕ್ಕೂ ಹೆಚ್ಚು ಜನ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಈ ಪೊಲಿಯೊ ವೈರಸ್ ಲಕ್ಷಣಗಳು ಕಾಣಿಸಿದಾಗ ಪೌಷ್ಟಿಕ ಆಹಾರ ಸೇವನೆಯಂತಹ ಮುಂಜಾಗ್ರತೆಯನ್ನು ತೆಗೆದುಕೊಂಡರೆ ಮಗುವಿಗೆ ಯಾವುದೇ ಅಪಾಯವಾಗುವುದಿಲ್ಲ. ಪೋಲಿಯೋದಿಂದ ಸಾಯುವ ಮಕ್ಕಳ ಸಂಖ್ಯೆ ಅಪಘಾತದಿಂದಾಗಿ ಸಾಯುವ ಮಕ್ಕಳ ಸಂಖ್ಯೆಗಿಂತಲೂ ಕಡಿಮೆ(ಪೋಲಿಯೋ ಲಸಿಕೆ ಹಾಕಿಸದಿದ್ದಾಗಿಯೂ)! ಅಲ್ಲದೇ ಡಿ.ಡಿ.ಟಿಯಂತಹ ರಸಾಯನಿಕಗಳ ಅಡ್ಡಪರಿಣಾಮಗಳಿಂದ ಉಂಟಾಗುವ ಲಕ್ಷಣಗಳನ್ನು ಪೋಲಿಯೋ ಎಂದು ತಿಳಿಯುವ ಸಾಧ್ಯತೆ ಇರುವುದರಿಂದ ಪೋಲಿಯೋದಿಂದ ಸಾಯುವವರ ಸಂಖ್ಯೆ ಇನ್ನೂ ಕಡಿಮೆಯಿದೆ ಎನ್ನಬಹುದು.
ಈಗ ಮೆನಿಂಜೈಟಿಸ್ ಗೆ ಬರೋಣ. ಲಸಿಕೆಯಿಂದಾಗಿ ಪೋಲಿಯೋ ನಮ್ಮ ದೇಹದಲ್ಲಿ ಮರುಕಳಿಸುವ ಸಾಧ್ಯತೆ ಇದೆ ಎಂದು ಹೇಳಿದೆನಷ್ಟೆ! ಪೋಲಿಯೊ ಮರುಕಳಿಸುವ ಸಂಖ್ಯೆ ಜಾಸ್ತಿಯಾದಾಗ ಲಸಿಕೆಯ ಮೇಲಿನ ನಂಬಿಕೆಯನ್ನು ಕಾಪಾಡಲು ಲಸಿಕೆಯ ನಂತರದ ಪೋಲಿಯೋಗೆ "ಅಸೆಪ್ಟಿಕ್ ಮೆನಿಂಜೈಟಿಸ್" ಎಂದು ಹೆಸರಿಡಲಾಯಿತು. ಈ ರೀತಿಯ ಮೆನಿಂಜೈಟಿಸ್ ಮತ್ತು ಪೊಲಿಯೊದ ಲಕ್ಷಣಗಳು ಒಂದೇ ಇರುತ್ತವೆ. ಇದು ಮೈಕೊಬ್ಯಾಕ್ಟೀರಿಯಾ ಎಂಬ ಸೂಕ್ಷ್ಮಾಣು ಜೀವಿಯಿಂದ ಹಾಗೂ ಲಸಿಕೆಗಳ ಅಡ್ಡಪರಿಣಾಮದಿಂದ ಬರುತ್ತದೆ ಎಂದು ಸಾಬೀತಾಗಿದೆ!
ಈ ಲೇಖನಕ್ಕೆ ಸೊಚಿಯಾಗಿ ನಾನು ಹೇಳುವುದೆಂದರೆ ಲಸಿಕೆಗಳು ನಿಸರ್ಗಕ್ಕೆ ವಿರುದ್ಧವಾದವುಗಳು. ನಮ್ಮ ದೇಹವು ಲಸಿಕೆಗಳನ್ನು ಒಪ್ಪಿಕೊಳ್ಳಲು ನಿಸರ್ಗಕ್ಕೆ ವಿರುದ್ಧವಾದ ರೀತಿಯಲ್ಲಿ ತಯಾರಾಗಬೇಕಾಗುತ್ತದೆ. ಅಪ್ರಾಕೃತಿಕ ಅಭ್ಯಾಸಗಳು ಎಂದಿಗೂ ಒಳ್ಳೆಯದಲ್ಲ. ಲಸಿಕೆ ಹಾಕಿದರೆ ಮಾತ್ರ ಮಗು ಆರೋಗ್ಯವಾಗಿರುತದೆ ಎಂಬುದು ಮೂಢನಂಬಿಕೆ. ಮಗು ಆರೋಗ್ಯವಾಗಿರಬೇಕೆಂದರೆ ವಯೋಸಹಜವಾದ ಪೊಷ್ಟಿಕ ಆಹಾರ, ಆಟ ಹಾಗೂ ವ್ಯಾಯಾಮಗಳಿಂದ ಪೋಷಿಸಬೇಕು . ನಮ್ಮ ಮುಂದಿನ ಪೀಳಿಗೆಯ ರಕ್ತದಲ್ಲಿ ಕಂಡೂ ಕಂಡೂ ವಿಷವನ್ನು ಸೇರಿಸುವುದು ತರವಲ್ಲ